Thursday, May 17, 2007

ಚೌ(ಕ್ಷೌ?)ರದ ಬಂಗಾರಪ್ಪ.

ಯಾಕೋ ತಲೆ ಭಾರ ಅನಿಸುತ್ತಿತ್ತು। ಬುದ್ದಿ ಹೆಚ್ಚಾಗುತ್ತಿರಬಹುದೇನೋ ಅಂದ್ಕೋತಿದ್ದೆ. "ಅದೇನದು ಕರಡಿ ತಲೆ ಆಯ್ದು॥ ಹೇರ್ ಕಟ್ ಮಾಡಿಸ್ಕಂಡು ಬನ್ನಿ, ಅಥ್ವಾ ಹಿಪ್ಪಿ ಬಿಡ ಪ್ಲಾನ್ ಎನದ್ರು ಇದ್ದಾ " ಅಂತ ಅರ್ಧಾಂಗಿ ಕೇಳಿದಾಗಲೇ ಗೊತ್ತಾಗಿದ್ದು ಬಂದಿದ್ದು ಬುದ್ದಿಯಲ್ಲ ತಲೆತುಂಬ ಕೂದಲು ಅಂತ. ಸರಿ ಅಂತ ಭಾನುವಾರ ಬೆಳಿಗ್ಗೆ ಕಟ್ಟಿಂಗ್ ಶಾಪ್ ಗೆ ಹೋದೆ. ಯಥಾಪ್ರಕಾರ ಅಲ್ಲೂ ರಷ್. ತಿರುಪತಿ ಹತ್ತಿರ ಇದ್ರೂ, ಶಾಪಿಂಗ್ ಮಾಲ್, ಡಿಸ್ಕೌಂಟ್ ಸೇಲ್ ಗಳಲ್ಲಿ ಜನರು ತುಂಬಿದ್ದರೂ ಚೌರದಂಗಡಿ ಇಷ್ಟು ಜನ ಇರ್ತಾರೆ ಅಂದ್ರೆ ನಂಬೋದೆ ಕಷ್ಟ ಬಿಡಿ. ಬಹುಷಃ ಅವರವರ ಪಾಲಿದನ್ನು ಅವರವರು ಕೆತ್ತಿಕೊಳ್ಳುತ್ತಿರಬೇಕು.ಹತ್ತರಲ್ಲಿ ಹನ್ನೊಂದನೆಯವನಾಗಿ ಅವನ ಹಾಕಿದ ಯಾವುದೋ ತಮಿಳು ಚಾನೆಲ್ ನೋಡುತ್ತಾ ಇದ್ದ ಸಣ್ಣ ಜಾಗದಲ್ಲಿ ಅಡ್ಜೆಸ್ಟ್ ಮಾಡಿಕೊಂಡು ಕುಳಿತೆ.4-5 ಜನರಿಗೆ ಒಮ್ಮೆಲೆ ಹೇರ್ ಕಟ್ ಮಾಡುವ ವ್ಯವಸ್ಥೆ ಇತ್ತು, ತಣ್ಣನೆಯ ಏಸಿ, ಟಿವಿ, ಚೊಕ್ಕನೆಯ ನೆಲ.. ಎಲ್ಲಾ ನೋಡಿ ಜೇಬನ್ನು ಮತ್ತೆ ತಡವಿ ನೋಡಿಕೊಂಡೆ. ಅಷ್ಟರಲ್ಲಿ ಒಬ್ಬನ ಚೌರಸೇವೆ ಮುಗಿದಿತ್ತು. ಇನ್ನೂ ಗೇಣುದ್ದ ಕೂದಲು ತಲೆಮೇಲೇ ಇತ್ತು, ನೆಲದಮೇಲೆ ಒಂದು ಗುಪ್ಪೆ ಕೂದಲು ಬಿದ್ದಿತ್ತು, ಹಾಗದರೆ ಮೊದಲು ಎಷ್ಟಿರಬಹುದು ಎಂದು ಯೋಚಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಕರಡಿಗಿಂತ ಉದ್ದ ಕೂದಲಿರುವ ಪ್ರಾಣಿಯನ್ನು ನಾನು ನೋಡಿರಲಿಲ್ಲ. ಆ ಅವಕಾಶ ಸ್ವಲ್ಪದರಲ್ಲೇ ತಪ್ಪಿತ್ತು.ಸಣ್ಣ ಹುಡುಗನೊಬ್ಬ 7-8 ವರ್ಷವಿರಬಹುದು ಅವನ ಅಪ್ಪನ ಜೊತೆ ಬಂದಿದ್ದ. ಆಕಡೆ ಈಕಡೆ ತಿರುಗಾಡುತ್ತ ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ. ಅವನನ್ನು ನೋಡಿದಾಗ ನೆನಪಾಗಿದ್ದು ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಚೌರ ಮಾಡಿಸುತ್ತಿದ್ದ ಕಥೆ.

ಮುಂದಿನ ಕಥೆ ಈಸ್ಟ್ ಮನ್ ಕಲರ್ ನಲ್ಲಿ:



ಆಗ ಚೌರ ಮಾಡಿಸುವುದೆಂದರೆ ಒಂದು ತರಹದ ಹಿಂಸೆ, ಈಗಿರುವ ಹೇರ್ ಸ್ಟೈಲ್ ಹಾಳಾಗುತ್ತದೆಂಬ ಅಳುಕು।"ಹೀಂಗೇ ಹಿಪ್ಪಿ ಬಿಟ್ಕಂಡಿದ್ರೆ ತಲೇಲಿ ಹೇನಿಗೆ ಮೀಸೆ ಬರ್ತು ನೋಡು ಮತ್ತೆ" ಅಂತ ಬೈಸಿಕೊಂಡಮೇಲೆ ಚೌರಕ್ಕೆ ರೆಡಿಯಾಗುತ್ತಿದ್ದದ್ದು.

ಚೌರ ಈಗಿನಂತೆ ಯಾವತ್ತಾದರೂ ಆಗುತ್ತಿರಲಿಲ್ಲ। ಭಾನುವಾರವೇ ಬರಬೇಕು, ಕಾಸರಗುಪ್ಪೆ ಬಂಗಾರಪ್ಪನೇ ಬರಬೇಕು. ಅವನು "ಭಾನುವಾರದ ಬಂಗಾರಪ್ಪ" ಎಂದೇ ಫೇಮಸ್। ಚೌರ ಮಾಡುವವನೇ ಮನೆಗೆ ಬಂದು ಚೌರ ಮಾಡುವುದು ಬಹುಷಃ ಬೆಂಗಳೂರಿನವರಿಗೆ "ಹೀಗೂ ಉಂಟೇ" ಅನ್ನಿಸಬಹುದು.

ಭಾನುವಾರ ಬೆಳಿಗ್ಗೆ ತಿಂಡಿ ತಿಂದಾದಮೇಲೆ ಬಂಗಾರಪ್ಪನಿಗೆ ಕಾಯುವುತ್ತಾ ಮನೆಯ ಹೊರಗಡೆ ಕಟ್ಟೆಮೇಲೆ ಕೂರುವುದರಿಂದ ಚೌರ ಕ್ರಮ ಶುರುವಾಗುತ್ತಿತ್ತು। "ಇನ್ನೂ ಯಂತಕ್ಕೋ ಬರ್ಲೇ ಇಲ್ಯಪ್ಪ ಬಪ್ದಿಲ್ಲೆ ಕಾಣ್ತು" ಅಂತ ಒಳಹೊರಗೆ ತಿರುಗಾಡುವುದು, "ಹೋಗಿ ಹೊರ್ಗಡೆ ಕೂತ್ಗ, ಅವ ಹಂಗೇ ಹೋಗಿಬಿಡ್ತ" ಅಂತ ಹೇಳಿಸಿಕೊಳ್ಳುವುದೂ ನಡೆಯುತ್ತಿತ್ತು.

ಬೆಳಿಗ್ಗೆ 9:00ರಿಂದ ಕಾದರೆ, 11 11:30ಕ್ಕೆ ಬಂಗಾರಪ್ಪ ಬರುತ್ತಿದ್ದ. ಒಳಗೆ ಓಡಿಹೋಗಿ ಒಂದು ಚೆಂಬು ನೀರು ತರುವಷ್ಟರಲ್ಲಿ ಬಂಗಾರಪ್ಪ ಕಟ್ಟೆ ಮೇಲೆ ತನ್ನ ಚೀಲ ಬಿಚ್ಚಿ, "ಹತಾರ" ಗಳನ್ನು ರೆಡಿಮಾಡಿ ಕೂತಿರುತ್ತಿದ್ದ. ಅಂಗಿ ತೆಗೆದುತಲೆಯನ್ನು ಅವನಿಗೊಪ್ಪಿಸಿ ಕೂತರೆ ಆಯಿತು, ಮುಂದಿನದು ಕತ್ತರಿ, ಹಣಿಗೆಗಳ ನರ್ತನ. ಚೆಂಬಿನಿಂದ ನೀರುತೆಗೆದು ತಲೆಗೆ ಹಚ್ಚಿ, ಕತ್ತರಿ ತೆಗೆದನೆಂದರೆ ಒಂದು ರೀತಿಯ ನಡುಕ. ಕತ್ತರಿಯ ಕಚ..ಕಚ..ಶಬ್ದವೇ ಹೆದರಿಕೆ ಹುಟ್ಟಿಸುವಂತಹುದು. ನಿರ್ಜೀವ ಕತ್ತರಿ ಬಂಗಾರಪ್ಪನ ಕೈಯಲ್ಲಿ ಹಸಿದ ಮೊಸಳೆ ಬಾಯ್ತೆರೆದಂತೆ ಕಾಣುತ್ತಿತ್ತು. ಮತ್ತೆ ಅದು ಸುಮ್ಮನಾಗುವುದು ನೆಲದ ಮೇಲಿಟ್ಟಾಗ ಮಾತ್ರ. ಕೂದಲನ್ನು ಕತ್ತರಿಸದಿದ್ದಾಗಲೂ ಗಾಳಿಯನ್ನು ಕತ್ತರಿಸುವಂತೆ ಶಬ್ದ ಮಾಡುವುದು ಆ ಕತ್ತರಿಯ ಮಹಿಮೆಯೋ ಅಥವಾ ಬಂಗಾರಪ್ಪನ ಕೈಚಳಕವೋ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.ಈ ನಡುವೆ "ಸ್ವಲ್ಪ ಉದ್ದ ಇರಲಿ" ಅಂತ ಮೆಲ್ಲನೆ ಹೇಳುವುದೂ, "ಸರೀ ಗಿಡ್ಡ ಹೊಡಿ, 3 ತಿಂಗ್ಳು ಬರ್ಬಾರ್ದು ಮತ್ತೆ" ಅಂತ ಅಪ್ಪ ಹೇಳುವುದೂ ನಡೆದೇ ಇರುತ್ತಿತ್ತು. ಚೌರ ಕ್ರಿಯೆಯ ಅಂತಿಮ ಮತ್ತು ಅತ್ಯಂತ ಕ್ರಿಟಿಕಲ್ ಭಾಗವೆಂದರೆ Razor ನದು.ಕತ್ತಿ ತೆಗೆದು ಬ್ಲೇಡ್ ಹಾಕಿದನೆಂದರೆ ಭಯ ನೂರ್ಮಡಿಯಾಗುತ್ತಿತ್ತು. ಲೀಲಾಜಾಲವಾಗಿ ಆಡುವ ಕತ್ತಿಯು ಒಂದು ರೀತಿಯ ಕಚಗುಳಿ ಮಾಡುತ್ತಿತ್ತು. ಆದರೆ ಅಲುಗಾಡುವಂತಿಲ್ಲ, ಅಲುಗಾಡಿದರೆ ಕತ್ತು, ಕಿವಿಗೆ ಮುತ್ತಿಟ್ಟರೆ ಎಂಬ ಭಯ.

ಚೌರವಾದ ನಂತರ ಕೂದಲು ರಾಶಿಯನ್ನು ಗುಡಿಸಿ ಕೆರೇಕೋಡಿಗೆ ಎಸೆದು, ಕಟ್ಟೆಗೆ ನೀರು ಹಾಕಿ ಕ್ಲೀನ್ ಮಾಡುವುದು। ಅಡ್ಡಬಾಗಿಲಿನಿಂದ ಅಥವಾ ಕೊಟ್ಟಿಗೆಯಿಂದ ಬಚ್ಚಲಮನೆಗೆ ಹೋಗಿ, ಬಕೆಟ್ಟಿನಲ್ಲಿ ತೋಡಿಟ್ಟ ನೀರಿನಲ್ಲಿ ಸ್ನಾನ ಮಾಡಿ ಕನ್ನಡಿಯ ಮುಂದೆ ನಿಂತಾಗಲೇ ಸಮಾಧಾನ.

ವಾಸ್ತವಕ್ಕೆ ಬಂದೆ.

ನನ್ನ ಸರದಿ ಬಂದಿತ್ತು। ಹೋಗಿ ಚೇರ್ ಮೇಲೆ ಕುಳಿತೆ, ಕುತ್ತಿಗೆಗೆ ಬಟ್ಟೆಯನ್ನು ಕಟ್ಟಿ,ಗಿಡಗಳಿಗೆ ಔಷಧಿ ಹೊಡೆಯುವ ಸಣ್ಣ ಸ್ಪ್ರೇಯರ್ ನಿಂದ ನೀರು ಹಾಕಿ ತನ್ನ ಕೆಲಸ ಪ್ರಾರಂಭಿಸಿದ. ಚೌರ ಮುಗಿದು 35ರೂ ಕೊಟ್ಟಮೇಲೆ ಅನಿಸುತ್ತಿತ್ತು ಎ.ಸಿ. ಇಲ್ಲದಿದ್ದರೂ, revolving chair ಇಲ್ಲದಿದ್ದರೂ ಬಂಗಾರಪ್ಪ 8-10ರೂಪಾಯಿಗೆ ಮಾಡುತ್ತಿದ್ದ ಚೌರವೇ ಒಂದು ರೀತಿಯಲ್ಲಿ ಚೆನ್ನಾಗಿರುತ್ತಿತ್ತು.

Wednesday, January 03, 2007

ಮರೆಯಲಾಗದ ದಿನ

ಆಲಿಕಲ್ಲು ಮಳೆ ಜೋರಾಗಿ ಬರುತ್ತಿತ್ತು. ಎಲ್ಲಿ ನೋಡಿದರೂ ಬಿಳಿಯ ಬಣ್ಣ. ತಣ್ಣನೆ ಗಾಳಿ ಬೀಸುತ್ಟಿತ್ತು. ಎಲ್ಲಿಯೂ ಮನುಷ್ಯರ ಸುಳಿವಿಲ್ಲ. ಮರಗಟ್ಟಿದ ಕೈಕಾಲುಗಳು, ನಡುಗುತ್ತಿರುವ ಎದೆ,ಏನೇನೋ ಯೋಚನೆಗಳು,ಅದುರುತ್ತಿರುವ ತುಟಿಗಳು...

ಇದು ಯಾವುದೋ ಸಿನಿಮಾ ಕತೆಯಲ್ಲ. ನನ್ನದೇ ಕತೆ.ಹಿಮಾಲಯ ಟ್ರೆಕ್ಕಿಂಗ್ ಎಂದು ಶಿವಮೊಗ್ಗದಿಂದ ಹೊರಟ ಟೀಮ್ ನಲ್ಲಿ ನಾನೂ ಒಬ್ಬ. 9 ದಿನಗಳ ಟ್ರೆಕ್ಕಿಂಗ್ ಕ್ಯಾಂಪ್ ಅದು. ಟ್ರೆಕ್ಕಿಂಗ್ ಉತ್ಸಾಹದಿಂದಲೇ ಪ್ರಾರಂಭವಾಗಿತ್ತು.
ಬೆಳಿಗ್ಗೆ 7:00 - 7:30ಗೆ ಶುರುವಾಗುತ್ತಿದ್ದ ನಮ್ಮ ಪಯಣ ಮುಂದಿನ ಕ್ಯಾಂಪ್ ಸಿಗುವವರೆಗೆ. ಸಾಧಾರಣವಾಗಿ 2:00 - 3:00ಕ್ಕೆ ಮುಗಿಯುತ್ತಿತ್ತು. ನಂತರ ಊಟ, ವಿಶ್ರಾಂತಿ, ಹರಟೆ, ಸುತ್ತಾಟ, ಸಂಜೆಯ ಊಟ, ನಿದ್ದೆ. ಇದು ನಮ್ಮ ದಿನಚರಿಯಾಗಿತ್ತು. ಹಗಲೆಲ್ಲಾ ಸಾಧಾರಣವಾಗಿ 23 - 25 ಡಿಗ್ರಿ ಇರುತ್ತಿದ್ದ temperature ರಾತ್ರಿಯಾಗುತ್ತಿದ್ದಂತೆ 2 - 3 ಡಿಗ್ರಿಗೆ ಬರುತ್ತಿತ್ತು. ಎರಡೆರಡು ರಗ್ಗು ಹೊದ್ದು ಮಲಗಿದರೂ ಗಡಗುಟ್ಟುವ ಚಳಿ.

ಎಂದಿನಂತೆ ಅಂದೂ ಬೆಳಿಗ್ಗೆ ಹೊರಟಾಗ ಘಂಟೆ 7:30ಯಾಗಿತ್ತು. ನಿಧಾನವಾಗಿ ಮೆಲೇರುತ್ತಿದ್ದ ಮೋಡ ಮಳೆಯಗುವಷ್ಟರಲ್ಲಿ ಅರ್ಧ ದೂರ ಮುಗಿದಿತ್ತು. ಮಳೆ ಶುರುವಾಯಿತು. ಅದು ಹಿಮಾಲಯದ ಮಳೆ, ಬೆಂಗಳೂರಿನ ಮಳೆಯಲ್ಲ. ಮಳೆಯೆಂದರೆ ನೀರಿನ ಹನಿಯಲ್ಲ, ಅಲಿಕಲ್ಲು ಬೀಳುತ್ತಿತ್ತು. ನಿಧಾನವಾಗಿ ಪ್ರಾರಂಭವಾದ ಮಳೆ ನೊಡುತ್ತಿದ್ದಂತೆ ಜೋರಾಯಿತು. ಆಲಿಕಲ್ಲು ಬಿದ್ದ ಜಾಗವೆಲ್ಲಾ ಉರಿಯತೊಡಗಿದಾಗ ಎಲ್ಲರೂ ಅಲ್ಲೆ ಒಂದು ಮರದ ಕೆಳಗೆ ನಿಂತರು. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಒಬ್ಬೊಬ್ಬರಾಗಿ ಹೊರಟರು. ಎಲ್ಲೆಲ್ಲೂ ಬಿಳಿ ಬಣ್ಣ. ದಾರಿಯೆಲ್ಲಾ ಬಿಳಿಯಾಗಿತ್ತು. ಸುಮಾರು ಅರ್ಧ ಅಡಿಯಷ್ಟು ಮಂಜಿನ ಹಾಸು ಹೊದೆಸಿದಂತಿತ್ತು. ಒಂದು ಕಿಲೋಮೀಟರ್ ನಡೆಯುವಷ್ಟರಲ್ಲಿ ಕೆಲವರು ಮುಂದಾಗಿ, ಕೆಲವರು ಹಿಂದಾಗಿ ನಾನು ಒಂಟಿಯಾಗಿದ್ದೆ.
ಮೈ ಕೊರೆಯುವ ಚಳಿಯಲ್ಲಿ ನಡೆಯುತ್ತಿದ್ದೆ. ನಿಧಾನವಾಗಿ ಕೈಕಾಲುಗಳು ಮರಗಟ್ಟುತ್ತಿತ್ತು. ಮೈಮೆಲಿದ್ದ ಬಟ್ಟೆಗಳೆಲ್ಲ ಸಾಕಷ್ಟು ತೋಯ್ದಿತ್ತು. ಮರಗಟ್ಟಿದ್ದ ಕೈ ಮೇಲೆ control ತಪ್ಪುತ್ತಿತ್ತು. ಕೈ ಯಾವುದೇ ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. Almost no sensation. ಕಾಲುಗಳು ಯಾಂತ್ರಿಕವಾಗಿ ನಡೆಯುತ್ತಿದ್ದವು. ನಡಿಗೆಯ ಮೇಲೆ ಯವುದೇ control ಇರಲಿಲ್ಲ. ಎಷ್ಟೆಂದರೆ ನಿಲ್ಲುವುದ್ದಕ್ಕೂspeed control ಮಾಡುವುದಕ್ಕೂ ಆಗುತ್ತಿರಲಿಲ್ಲ. ನಿಧಾನವಾಗಿ ಭಯದ ಅರಿವಾಗುತ್ತಿತ್ತು. ಎಲ್ಲೂ ಯಾರೂ ಕಾಣುತ್ತಿರಲಿಲ್ಲ, ಎಲ್ಲೆಲ್ಲೂ ಬಿಳಿಯ ಬಣ್ಣ, ಚಳಿಯ ನಡುಕ, ಮರಗಟ್ಟಿದ ಕೈ ಕಾಲು. ಇದೇಕೋ ಕೊನೆಕಾಣದ ನಡಿಗೆಯೆನಿಸುತ್ತಿತ್ತು.
ಕೊನೆಯ ಕೆಲವು ನಿಮಿಷಗಳು.
ನಿಜ, ನಿಜವಾಗಿಯೂ ನನ್ನ ಕೊನೆಯ ಕ್ಷಣಗಳು ಸಮೀಪಿಸಿದಂತೆ ಅನ್ನಿಸುತ್ತಿತ್ತು. ಆ ಕ್ಷಣದಲ್ಲಿ ಬಂದ ಯೋಚನೆಗಳನ್ನೆಲ್ಲಾ ನೆನೆಪಿಸಿಕೊಳ್ಳಲಾರೆ. ದೇವರು, ಮನೆ, ಅಪ್ಪ, ಅಮ್ಮ...ಎಲ್ಲವೂ ನೆನಪಾಗಿತ್ತು.
ಎಲ್ಲೆಡೆ ನಿಶ್ಯಬ್ದ.
ಮುಂದೇನು ಎನ್ನುವ ಉದ್ವೇಗವಿರಲಿಲ್ಲ. ಎಲ್ಲವೂ ನಿಶ್ಚಿತವೆನಿಸುತ್ತಿತ್ತು. ನಾನಿನ್ನು ಕೆಲವು ನಿಮಿಷಗಳು ಮಾತ್ರ ಎನ್ನುವುದೆ ತೀರ್ಮಾನವಾಗಿತ್ತು.
ಕಹಿಯೋ ಸಿಹಿಯೋ, ಸತ್ಯವನ್ನು ಒಪ್ಪಿಕೊಂಡ ಮನಸ್ಸು ಶಾಂತವಾಗಿತ್ತು. ನಿರ್ಲಿಪ್ತ....
ಬದುಕುವ ಆಸೆ ಕೂಗಿ ಕರೆದಿತ್ತು....!!
ದೂರದಲ್ಲೊಂದು ಸಣ್ಣ ಮನೆ ಕಾಣಿಸಿತ್ತು..!!!

ಓಡಬೇಕೆನಿಸಿದರೂ ಓಡಲಾಗದ ಪರಿಸ್ಥಿತಿ.

ಅಂತೂ ಇಂತೂ ಮನೆ ಸೇರಿದ್ದೆ. ಬೆನ್ನಲ್ಲಿದ್ದ ಬ್ಯಾಗ್ ತೆಗೆಯಲೂ ಆಗದ ಪರಿಸ್ಥಿತಿ ನನ್ನದಾಗಿತ್ತು. ನನಗಿಂತ ಮೊದಲು ಅಲ್ಲಿಗೆ ಬಂದಿದ್ದವರು ನನ್ನ ಬ್ಯಾಗ್ ತೆಗೆದು, ಶೂ, ಸಾಕ್ಸ್ ತೆಗೆದು ಕರೆದುಕೊಂಡು ಹೋಗಿ ಒಲೆ ಎದುರು ಕೂರಿಸಿದಾಗ ಪುನರ್ ಜನ್ಮದ ಅನುಭವವಾಗಿತ್ತು.
ಅದೊಂದು ಮರೆಯಲಾಗದ ದಿನ.

ಮತ್ತೆಂದೂ ಆ ರೀತಿಯ ಮಳೆ ಬರಲಿಲ್ಲ..ಆ ಅನುಭವವೂ...