Wednesday, January 03, 2007

ಮರೆಯಲಾಗದ ದಿನ

ಆಲಿಕಲ್ಲು ಮಳೆ ಜೋರಾಗಿ ಬರುತ್ತಿತ್ತು. ಎಲ್ಲಿ ನೋಡಿದರೂ ಬಿಳಿಯ ಬಣ್ಣ. ತಣ್ಣನೆ ಗಾಳಿ ಬೀಸುತ್ಟಿತ್ತು. ಎಲ್ಲಿಯೂ ಮನುಷ್ಯರ ಸುಳಿವಿಲ್ಲ. ಮರಗಟ್ಟಿದ ಕೈಕಾಲುಗಳು, ನಡುಗುತ್ತಿರುವ ಎದೆ,ಏನೇನೋ ಯೋಚನೆಗಳು,ಅದುರುತ್ತಿರುವ ತುಟಿಗಳು...

ಇದು ಯಾವುದೋ ಸಿನಿಮಾ ಕತೆಯಲ್ಲ. ನನ್ನದೇ ಕತೆ.ಹಿಮಾಲಯ ಟ್ರೆಕ್ಕಿಂಗ್ ಎಂದು ಶಿವಮೊಗ್ಗದಿಂದ ಹೊರಟ ಟೀಮ್ ನಲ್ಲಿ ನಾನೂ ಒಬ್ಬ. 9 ದಿನಗಳ ಟ್ರೆಕ್ಕಿಂಗ್ ಕ್ಯಾಂಪ್ ಅದು. ಟ್ರೆಕ್ಕಿಂಗ್ ಉತ್ಸಾಹದಿಂದಲೇ ಪ್ರಾರಂಭವಾಗಿತ್ತು.
ಬೆಳಿಗ್ಗೆ 7:00 - 7:30ಗೆ ಶುರುವಾಗುತ್ತಿದ್ದ ನಮ್ಮ ಪಯಣ ಮುಂದಿನ ಕ್ಯಾಂಪ್ ಸಿಗುವವರೆಗೆ. ಸಾಧಾರಣವಾಗಿ 2:00 - 3:00ಕ್ಕೆ ಮುಗಿಯುತ್ತಿತ್ತು. ನಂತರ ಊಟ, ವಿಶ್ರಾಂತಿ, ಹರಟೆ, ಸುತ್ತಾಟ, ಸಂಜೆಯ ಊಟ, ನಿದ್ದೆ. ಇದು ನಮ್ಮ ದಿನಚರಿಯಾಗಿತ್ತು. ಹಗಲೆಲ್ಲಾ ಸಾಧಾರಣವಾಗಿ 23 - 25 ಡಿಗ್ರಿ ಇರುತ್ತಿದ್ದ temperature ರಾತ್ರಿಯಾಗುತ್ತಿದ್ದಂತೆ 2 - 3 ಡಿಗ್ರಿಗೆ ಬರುತ್ತಿತ್ತು. ಎರಡೆರಡು ರಗ್ಗು ಹೊದ್ದು ಮಲಗಿದರೂ ಗಡಗುಟ್ಟುವ ಚಳಿ.

ಎಂದಿನಂತೆ ಅಂದೂ ಬೆಳಿಗ್ಗೆ ಹೊರಟಾಗ ಘಂಟೆ 7:30ಯಾಗಿತ್ತು. ನಿಧಾನವಾಗಿ ಮೆಲೇರುತ್ತಿದ್ದ ಮೋಡ ಮಳೆಯಗುವಷ್ಟರಲ್ಲಿ ಅರ್ಧ ದೂರ ಮುಗಿದಿತ್ತು. ಮಳೆ ಶುರುವಾಯಿತು. ಅದು ಹಿಮಾಲಯದ ಮಳೆ, ಬೆಂಗಳೂರಿನ ಮಳೆಯಲ್ಲ. ಮಳೆಯೆಂದರೆ ನೀರಿನ ಹನಿಯಲ್ಲ, ಅಲಿಕಲ್ಲು ಬೀಳುತ್ತಿತ್ತು. ನಿಧಾನವಾಗಿ ಪ್ರಾರಂಭವಾದ ಮಳೆ ನೊಡುತ್ತಿದ್ದಂತೆ ಜೋರಾಯಿತು. ಆಲಿಕಲ್ಲು ಬಿದ್ದ ಜಾಗವೆಲ್ಲಾ ಉರಿಯತೊಡಗಿದಾಗ ಎಲ್ಲರೂ ಅಲ್ಲೆ ಒಂದು ಮರದ ಕೆಳಗೆ ನಿಂತರು. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಒಬ್ಬೊಬ್ಬರಾಗಿ ಹೊರಟರು. ಎಲ್ಲೆಲ್ಲೂ ಬಿಳಿ ಬಣ್ಣ. ದಾರಿಯೆಲ್ಲಾ ಬಿಳಿಯಾಗಿತ್ತು. ಸುಮಾರು ಅರ್ಧ ಅಡಿಯಷ್ಟು ಮಂಜಿನ ಹಾಸು ಹೊದೆಸಿದಂತಿತ್ತು. ಒಂದು ಕಿಲೋಮೀಟರ್ ನಡೆಯುವಷ್ಟರಲ್ಲಿ ಕೆಲವರು ಮುಂದಾಗಿ, ಕೆಲವರು ಹಿಂದಾಗಿ ನಾನು ಒಂಟಿಯಾಗಿದ್ದೆ.
ಮೈ ಕೊರೆಯುವ ಚಳಿಯಲ್ಲಿ ನಡೆಯುತ್ತಿದ್ದೆ. ನಿಧಾನವಾಗಿ ಕೈಕಾಲುಗಳು ಮರಗಟ್ಟುತ್ತಿತ್ತು. ಮೈಮೆಲಿದ್ದ ಬಟ್ಟೆಗಳೆಲ್ಲ ಸಾಕಷ್ಟು ತೋಯ್ದಿತ್ತು. ಮರಗಟ್ಟಿದ್ದ ಕೈ ಮೇಲೆ control ತಪ್ಪುತ್ತಿತ್ತು. ಕೈ ಯಾವುದೇ ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. Almost no sensation. ಕಾಲುಗಳು ಯಾಂತ್ರಿಕವಾಗಿ ನಡೆಯುತ್ತಿದ್ದವು. ನಡಿಗೆಯ ಮೇಲೆ ಯವುದೇ control ಇರಲಿಲ್ಲ. ಎಷ್ಟೆಂದರೆ ನಿಲ್ಲುವುದ್ದಕ್ಕೂspeed control ಮಾಡುವುದಕ್ಕೂ ಆಗುತ್ತಿರಲಿಲ್ಲ. ನಿಧಾನವಾಗಿ ಭಯದ ಅರಿವಾಗುತ್ತಿತ್ತು. ಎಲ್ಲೂ ಯಾರೂ ಕಾಣುತ್ತಿರಲಿಲ್ಲ, ಎಲ್ಲೆಲ್ಲೂ ಬಿಳಿಯ ಬಣ್ಣ, ಚಳಿಯ ನಡುಕ, ಮರಗಟ್ಟಿದ ಕೈ ಕಾಲು. ಇದೇಕೋ ಕೊನೆಕಾಣದ ನಡಿಗೆಯೆನಿಸುತ್ತಿತ್ತು.
ಕೊನೆಯ ಕೆಲವು ನಿಮಿಷಗಳು.
ನಿಜ, ನಿಜವಾಗಿಯೂ ನನ್ನ ಕೊನೆಯ ಕ್ಷಣಗಳು ಸಮೀಪಿಸಿದಂತೆ ಅನ್ನಿಸುತ್ತಿತ್ತು. ಆ ಕ್ಷಣದಲ್ಲಿ ಬಂದ ಯೋಚನೆಗಳನ್ನೆಲ್ಲಾ ನೆನೆಪಿಸಿಕೊಳ್ಳಲಾರೆ. ದೇವರು, ಮನೆ, ಅಪ್ಪ, ಅಮ್ಮ...ಎಲ್ಲವೂ ನೆನಪಾಗಿತ್ತು.
ಎಲ್ಲೆಡೆ ನಿಶ್ಯಬ್ದ.
ಮುಂದೇನು ಎನ್ನುವ ಉದ್ವೇಗವಿರಲಿಲ್ಲ. ಎಲ್ಲವೂ ನಿಶ್ಚಿತವೆನಿಸುತ್ತಿತ್ತು. ನಾನಿನ್ನು ಕೆಲವು ನಿಮಿಷಗಳು ಮಾತ್ರ ಎನ್ನುವುದೆ ತೀರ್ಮಾನವಾಗಿತ್ತು.
ಕಹಿಯೋ ಸಿಹಿಯೋ, ಸತ್ಯವನ್ನು ಒಪ್ಪಿಕೊಂಡ ಮನಸ್ಸು ಶಾಂತವಾಗಿತ್ತು. ನಿರ್ಲಿಪ್ತ....
ಬದುಕುವ ಆಸೆ ಕೂಗಿ ಕರೆದಿತ್ತು....!!
ದೂರದಲ್ಲೊಂದು ಸಣ್ಣ ಮನೆ ಕಾಣಿಸಿತ್ತು..!!!

ಓಡಬೇಕೆನಿಸಿದರೂ ಓಡಲಾಗದ ಪರಿಸ್ಥಿತಿ.

ಅಂತೂ ಇಂತೂ ಮನೆ ಸೇರಿದ್ದೆ. ಬೆನ್ನಲ್ಲಿದ್ದ ಬ್ಯಾಗ್ ತೆಗೆಯಲೂ ಆಗದ ಪರಿಸ್ಥಿತಿ ನನ್ನದಾಗಿತ್ತು. ನನಗಿಂತ ಮೊದಲು ಅಲ್ಲಿಗೆ ಬಂದಿದ್ದವರು ನನ್ನ ಬ್ಯಾಗ್ ತೆಗೆದು, ಶೂ, ಸಾಕ್ಸ್ ತೆಗೆದು ಕರೆದುಕೊಂಡು ಹೋಗಿ ಒಲೆ ಎದುರು ಕೂರಿಸಿದಾಗ ಪುನರ್ ಜನ್ಮದ ಅನುಭವವಾಗಿತ್ತು.
ಅದೊಂದು ಮರೆಯಲಾಗದ ದಿನ.

ಮತ್ತೆಂದೂ ಆ ರೀತಿಯ ಮಳೆ ಬರಲಿಲ್ಲ..ಆ ಅನುಭವವೂ...